ಶಿವಮೊಗ್ಗ ಏರ್ಪೋರ್ಟ್​ಗೆ 20 ಸ್ವಾಮೀಜಿಗಳ ಜೊತೆ ಬಿವೈ ಸಹೋದರರ ಭೇಟಿ: ಕೊನೆ ಹಂತದ ಕಾಮಗಾರಿ ವೀಕ್ಷಣೆ

ಶಿವಮೊಗ್ಗ: ಸಹ್ಯಾದ್ರಿಯ ತಪ್ಪಲಿನಲ್ಲಿ ವಿಮಾನದ ಹಾರಾಟದ ರೆಕ್ಕೆಗಳನ್ನು ನೋಡಬೇಕು ಎನ್ನುವ ಮಲೆನಾಡ ಜನರ ಕನಸು ಈಡೇರುವ ಸಮಯ ಹತ್ತಿರವಾಗಿದೆ. ತಾಲೂಕಿನ ಸೋಗಾನೆಗಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದ್ದು, ಫೆಬ್ರುವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಅಂತೆಯೇ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯ ವಿವಿಧ ಮಠಾಧೀಶರೊಂದಿಗೆ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದರು. ಮುರುಘಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ 20 ಸ್ವಾಮೀಜಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದರಿಂದ ಜಿಲ್ಲೆಯ ಬೆಳವಣಿಗೆ ಸಹಾಯಕವಾಗುತ್ತದೆ ಎಂಬ ಅಭಿಪ್ರಾಯವನ್ನು ಸ್ವಾಮೀಜಿಗಳು ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ವೀಕ್ಷಿಸಿದ ಎಲ್ಲ ಸ್ವಾಮೀಜಿಗಳಿಗೆ ಬಿವೈ ಸಹೋದರರು ಸನ್ಮಾನ ಮಾಡಿದರು.

ವಿಮಾನ ನಿಲ್ದಾಣ ಫೆ.27 ಕ್ಕೆ ಉದ್ಘಾಟನೆ:

 ವಿಮಾನ ನಿಲ್ದಾಣದ ಕಾಮಗಾರಿಯು ಪೂರ್ಣವಾಗಿದ್ದು, ಕೆಲ ಸಣ್ಣ ಪುಟ್ಟ ಕಾಮಗಾರಿಯಷ್ಟೇ ಬಾಕಿ ಉಳಿದುಕೊಂಡಿದೆ. ಇದರಿಂದ ಫೆ.27ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ತಯಾರಿ ಮಾಡಲಾಗುತ್ತಿದೆ. ಹಾಲಿ ಏರ್ಪೋರ್ಟ್​​​ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಬೇಕಿದೆ. ಶಿವಮೊಗ್ಗ ವಿಮಾನ‌ ನಿಲ್ದಾಣದ ರನ್ ವೇ 3200 ಮೀಟರ್ ಇದ್ದು, ಇದು ಬೆಂಗಳೂರು ಬಿಟ್ಟರೆ ಎರಡನೇ ಅತಿದೊಡ್ಡ ರನ್ ವೇ ಆಗಿದೆ. ಅಲ್ಲದೇ ರಾತ್ರಿ ವೇಳೆ ಲ್ಯಾಂಡಿಂಗ್ ಮಾಡಲು ಸಹ ಅನುಕೂಲವಿದೆ. ಸದ್ಯ ಸ್ಟಾರ್ ಏರ್ ವೇಸ್ ವಿಮಾನ ಸೇರಿದಂತೆ ಇತರ ವಿಮಾನ ಕಂಪನಿಗಳು ಶಿವಮೊಗ್ಗ ಏರ್ಪೋರ್ಟ್​​ಗೆ ಬರಲು ಒಪ್ಪಿಗೆ ನೀಡಿವೆ. ಮುಂದೆ ಇನ್ನಷ್ಟು ವಿಮಾನ ಕಂಪನಿಗಳು ಬರಲಿವೆ. ಸದ್ಯ ಶಿವಮೊಗ್ಗ ಜಿಲ್ಲೆಯ ಜನತೆ ಏರ್ಪೋರ್ಟ್ ಉದ್ಘಾಟನೆಗೆ ಕಾಯುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕನಸು:

ಬಿಎಸ್​ವೈ ಯಡಿಯೂರಪ್ಪ ಅವರು 2008ರಲ್ಲಿ ಸಿಎಂ ಆಗಿದ್ದ ವೇಳೆ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಆದರೆ ಬಳಿಕ ನಡೆದ ರಾಜಕೀಯ ವಿದ್ಯಮಾನಗಳಿಂದ ಹಾಗೂ ಕಾರಣಾಂತರಗಳಿಂದ ವಿಮಾನ ನಿಲ್ದಾಣ ಕಾಮಗಾರಿ ಕುಂಟುತ್ತಾ ಸಾಗಿತ್ತು. ಆದ್ರೆ ಯಡಿಯೂರಪ್ಪ ಮತ್ತೆ ಸಿಎಂ ಆದ ಬಳಿಕ ಕಾಮಗಾರಿಗೆ ವೇಗ ನೀಡಿದ್ದರು. ಇದೀಗ ಕಾಮಗಾರಿಗೆ ಕೊನೆಯ ಹಂತಕ್ಕೆ ಬಂದಿದೆ.

ವಿಮಾನ ನಿಲ್ದಾಣ ವಿವಾದ:

ವಿಮಾನ ನಿಲ್ದಾಣದ ಟರ್ಮಿನಲ್​ ಅ​ನ್ನು ಕಮಲದ ಆಕೃತಿಯಲ್ಲಿ ರೂಪಿಸಲು ನಿರ್ಧರಿಸಲಾಗಿತ್ತು. ಇದು ಬಿಜೆಪಿ ಚಿಹ್ನೆ ಎಂದು ಕಾಂಗ್ರೆಸ್ ಆರೋಪಿಸಿದ್ದರಿಂದ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಿಜೆಪಿಗರು ಇದಕ್ಕೆ ತಿರುಗೇಟು ನೀಡಿ, ಕಮಲ ಲಕ್ಷ್ಮೀ ಸಂಕೇತ ಎಂದು ಸಮರ್ಥಿಸಿಕೊಂಡಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಾಮಕರಣ:

ವಿಮಾನ ನಿಲ್ದಾಣಕ್ಕೆ ಕುವೆಂಪು, ಶಾಂತವೇರಿ ಗೋಪಾಲಗೌಡ, ಕೆಳದಿ ಶಿವಪ್ಪನಾಯಕ, ಅಕ್ಕಮಹಾದೇವಿ, ಎಸ್ ಬಂಗಾರಪ್ಪ ಹಾಗೂ ಬಿ ಎಸ್ ಯಡಿಯೂರಪ್ಪ ಅವರ ಹೆಸರಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದ್ರೆ ರಾಜ್ಯ ಸರ್ಕಾರವು ಬಿ ಎಸ್ ಯಡಿಯೂರಪ್ಪ ಅವರ ಹೆಸರಿಡುವುದಾಗಿ ಕಳೆದ ವರ್ಷ ಘೋಷಿಸಿತ್ತು. ಈ ಬೆನ್ನಲ್ಲೇ ಯಡಿಯೂರಪ್ಪ ಅವರು ಪತ್ರ ಬರೆದು, ತನ್ನ ಹೆಸರು ಇಡುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಹಲವು ಮಹನೀಯರಿದ್ದಾರೆ ಅವರ ಹೆಸರಿಡಿ ಎಂದು ಮಾಜಿ ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದರು.


ವರದಿ : ಅಕ್ಷಯ್ ಕುಮಾರ್

Post a Comment

Previous Post Next Post