ಕಾರ್ಗಿಲ್ ಯುದ್ಧದ ಸಮಯದಲ್ಲಿ ಶತ್ರುಗಳನ್ನು ಹೆಡೆಮುರಿ ಕಟ್ಟಿ ಭಾರತ ದೇಶದ ಕಾರ್ಗಿಲ್ ವಿಜಯೋತ್ಸವಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದಂತಹ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದ ನಿವಾಸಿ ಹಾಗೂ ಮಾಜಿ ಯೋಧ ಶ್ರೀನಿವಾಸ್ ಕೆ ಆರ್ ಅವರಿಗೆ ಇದೀಗ "ವೀರಯೋಧ" ಎಂಬ ಬಿರುದು ಲಭಿಸಿದೆ.
ಭಾನುವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ನುಡಿ ಎಂಬ ಸಾಹಿತ್ಯ ಕಾರ್ಯಕ್ರಮದಲ್ಲಿ ನಮ್ಮ ಮಲೆನಾಡಿನ ಹೆಮ್ಮೆಯ ಯೋಧನಿಗೆ ಇದೀಗ "ವೀರಯೋಧ" ಎಂಬ ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಗವಿಸಿದ್ದೇಶ್ವರ ಮಠದ ಹಿರಿಶಾಂತವೀರ ಮಹಾಸ್ವಾಮಿಗಳು,ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರಾದ ಮಧುನಾಯ್ಕ್ ಲಮಾಣಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರದ ಶ್ರೀನಿವಾಸ್ ಕೆ ಆರ್ ರವರು ಇಪ್ಪತ್ತೆರಡು ವರ್ಷ ಭಾರತೀಯ ಸೇನೆಯಲ್ಲಿ ಗಡಿ ಭದ್ರತಾ ಪಡೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದರು.ಸೇನೆಯಲ್ಲಿ ಹವಾಲ್ದಾರ್ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ಕೂಡ ಕೆಲಸವನ್ನು ಮುಂದುವರಿಸಿ ಉನ್ನತ ಸ್ಥಾನಕ್ಕೆ ಹೋಗಬಹುದಿತ್ತು ಆದರೆ ಯುವಕರಿಗೆ ಅವಕಾಶ ದೊರೆಯಲಿ ಎಂದು ಸ್ವತಃ ಇವರೇ ವಿಆರ್ ಎಸ್ ತೆಗೆದುಕೊಂಡರು ನಂತರ ಇಲ್ಲಿ ಬಂದು ಯಾವ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೂ ಅವರಿಗೆ ಕೆಲಸ ನಿರಾಯಾಸವಾಗಿ ಸಿಗುತ್ತಿತ್ತು ಆದರೆ ಇನ್ನೊಬ್ಬ ಯುವಕನ ಕೆಲಸವನ್ನು ಕಬಳಿಸುವ ಮನಸಾಗದೆ ಇವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಷ್ಟೊಂದು ಉದಾರ ಮನಸ್ಸು ಇರುವಂತಹ ನಮ್ಮೂರಿನ ಹೆಮ್ಮೆಯ ಸೈನಿಕನಿಗೆ ನಮ್ಮದೊಂದು ಸಲಾಂ.ಭಾರತಾಂಬೆಯ ಸೇವೆ ಸಲ್ಲಿಸಿದ ನಮ್ಮೂರಿನ ಈ ಹೆಮ್ಮೆಯ ಯೋಧನಿಗೆ ಈ ಬಿರುದು ಸಿಕ್ಕಿದ್ದು ಮಲೆನಾಡಿಗೆ ಬಿರುದು ಸಿಕ್ಕಷ್ಟು ಹೆಮ್ಮೆಯೆನಿಸುತ್ತಿದೆ.