- ಸಹಾಯ ಧನ ಹೆಸರಲ್ಲಿ ವಂಚನೆ: ಫೈಬರ್ ದೋಟಿಗೆ ಸರ್ಕಾರದ ಸಬ್ಸಿಡಿ ಇಲ್ಲ
- ಇತ್ತೀಚಿಗೆ ಬಂದ ಕಂಪನಿಗಳಿಂದ ಮಾರ್ಕೆಟಿಂಗ್ ತಂತ್ರಗಾರಿಕೆ
ತೀರ್ಥಹಳ್ಳಿ: ಮಲೆನಾಡಿನ ಅನೇಕ ತಾಲೂಕಲ್ಲಿ ಫೈಬರ್ ದೋಟಿ ಹೆಸರಲ್ಲಿ ರೈತರ ಹಣ ಲೂಟಿಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಹಾಯ ಧನ ಹೆಸರಲ್ಲಿ ವಂಚನೆ ಮಾಡಲಾಗುತ್ತಿದೆ. ಫೈಬರ್ ದೋಟಿಗೆ ಸರ್ಕಾರದ ಸಬ್ಸಿಡಿ ಇಲ್ಲ ಎಂಬುದು ತಿಳಿದು ಬಂದಿದೆ. ಇತ್ತೀಚಿಗೆ ಬಂದ ಕೆಲವು ಕಂಪನಿಗಳಿಂದ ಮಾರ್ಕೆಟಿಂಗ್ ತಂತ್ರಗಾರಿಕೆ ಇದಾಗಿದ್ದು ಈಗ ಜಾಲ ಬಯಲಾಗಿದೆ.
ನಿರೀಕ್ಷೆಗೂ ಮೀರಿ ಸುರಿದ ಮಳೆಯ ನಡುವೆ ಕೊಳೆರೋಗದಿಂದ ಅಡಕೆ ಬೆಳೆ ಸಂರಕ್ಷಣೆಗೆ ಕೊಳೆರೋಗ ಔಷಧ ಸಿಂಪಡಣೆಗೆ ಫೈಬರ್ ದೋಟಿ ಬಳಸುವ ಕಡೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಇದರಿಂದಾಗಿ ಫೈಬರ್ ದೋಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ರೈತರನ್ನು ವ್ಯವಸ್ಥಿತವಾಗಿ ವಂಚಿಸುವ ಜಾಲ ತಲೆ ಎತ್ತಿದೆ. ಸರಕಾರದ ಸಹಾಯಧನ ದೊರೆಯುತ್ತದೆ ಎಂದು ರೈತರನ್ನು ನಂಬಿಸಿ ದೋಟಿಯನ್ನು ದುಬಾರಿ ದರಕ್ಕೆ ಮಾರಾಟ ಮಾಡುವುದು ಮಲೆನಾಡಲ್ಲಿ ಕಂಡು ಬಂದಿದೆ.
ಆದರೆ ಔಷಧ ಸಿಂಪಡಣೆಯ ಫೈಬರ್ ದೋಟಿಗೆ ಸರಕಾರ ಇನ್ನೂ ಸಹಾಯಧನ ಮೀಸಲಿಟ್ಟಿಲ್ಲ. ಸಂಬಂಧ ತೋಟಗಾರಿಕೆ, ಕೃಷಿ ಇಲಾಖೆ ಕ್ರಿಯಾಯೋಜನೆ ರೂಪಿಸಿ ಅನುದಾನ ಬಿಡುಗಡೆಗೆ ಕೋರಿಲ್ಲ, ಫೈಬರ್ ದೋಟಿ ಸಹಾಯಧನ ನೀಡುವ ಕುರಿತು ಯಾವುದೇ ಕಂಪನಿ, ಸಂಸ್ಥೆಗೆ ಆದೇಶ ಪತ್ರವನ್ನೂ ನೀಡಿಲ್ಲ.
ನೈಜ ಬೆಲೆ ಮುಚ್ಚಿಟ್ಟು ಮಾರಾಟ!
ಸಹಾಯಧನ ದೊರೆಯುತ್ತದೆ ಎಂಬ ನಂಬಿಕೆಯಲ್ಲಿ ಈಗಾಗಲೇ ನೂರಾರು ರೈತರು ದೋಟಿ ಖರೀದಿಸಿದ್ದಾರೆ. 70 ಆಡಿ ಎತ್ತರದ ದೋಟಿಗೆ 40 ಸಾವಿರ ರೂ. ನೈಜ ಬೆಲೆ ಆಗಿದೆ. 10 ಸಾವಿರ ರೂ. ಬೆಲೆಯ ದೋಟಿಯನ್ನು 40 ಸಾವಿರ ರೂ.ಗೆ ಮಾರಲಾಗುತ್ತಿದ್ದು, 30 ಸಾವಿರ ರೂ. ಸರಕಾರದ ಸಹಾಯಧನ ಲಭಿಸುತ್ತದೆ ಎನ್ನುವ ವಂಚನೆ ಮಾತು ನಂಬಿ ರೈತರು ಬೆಚ್ಚಿ ಬೀಳುವಂತಾಗಿದೆ. ತೋಟಗಾರಿಕೆ, ಕೃಷಿ ಇಲಾಖೆಯಲ್ಲಿ ಯಂತ್ರೋಪಕರಣ ಸಹಾಯಧನ ಯೋಜನೆ ಚಾಲ್ತಿಯಲ್ಲಿದೆ. ಆದರೆ, ಸರಕಾರ ನಿಗದಿಪಡಿಸಿದ ಪಟ್ಟಿಯಲ್ಲಿ ಫೈಬರ್ ದೋಟಿ ಇನ್ನೂ ಸಹಾಯಧನದ ಸ್ಥಾನ ಪಡೆದಿಲ್ಲ.